ಗೆಳೆಯ ವಿಷ್ಣು ಪ್ರಸಾದ್ ಹಾಗೂ ಪ್ರಶಾಂತ್ ಪಂಡಿತ್ ಇಬ್ಬರೂ ತಾವು ಕೆಲಸ ಮಾಡಿದ್ದ ಸಿನೆಮಾ ನೀಲಿ ಹಕ್ಕಿ ಬಗ್ಗೆ ಹಂಚಿಕೊಂಡಿದ್ದರು. ನನಗೆ ಸಿನೆಮಾ ನೋಡುವ ಅವಕಾಶವೂ ಸಿಕ್ಕಿತ್ತು. ನೋಡಿ ಬಹಳ ಸಂತೋಷವಾಯಿತು. ನಮ್ಮೂರಿನ ಕಥೆಯನ್ನು ವರ್ಣಿಸುವಾಗ ಅದರಲ್ಲಿರುವ ನವಿರಾದ ಪದರಗಳ ನಿರ್ಮಾಣ ಹಾಗೂ ನಿರ್ವಹಣೆ ಮಾಡಿರುವ ರೀತಿ ಇಷ್ಟವಾಯಿತು. ಕಾಡಿನ ನೀಲಿ ಹಕ್ಕಿ ನಾಡಿನಲ್ಲಿ ಹುಡುಕುವುದು, ಅದು ನಾಡಿನಲ್ಲಿ ಗುಜರಿ ಸಾಮಗ್ರಿಗಳ ರಾಶಿಯಿಂದ ನಿರ್ಮಾಣವಾಗುವುದು, ಮೂರಾಬಟ್ಟೆಯಾದ ನೆಮ್ಮದಿಯ ಜೀವಗಳ ಅಸ್ತಿಪಂಜರದಂತೆಯೇ ಕಾಣಿಸಿದ್ದು ನಿರ್ದೇಶಕರ ಕಾಳಜಿಯನ್ನೂ, ಕುಸುರಿ ಕೆಲಸವನ್ನೂ ಎತ್ತಿ ತೋರಿಸುವಂಥಾದ್ದು. ಈ ನಿರ್ದೇಶಕರಿಗೆ ಸಮರ್ಥ ಜೊತೆ ನೀಡಿದ್ದು ಚಿತ್ರದ ಕಲಾವಿದರು. ಒಬ್ಬರಿಗೊಬ್ಬರು ಸವಾಲು ಹಾಕುವಂತೆ ನಟಿಸಿದ್ದಾರೆ. ಗೆಳೆಯ ವಿಷ್ಣು ಪ್ರಸಾದ್ ಸಾಮರ್ಥ್ಯ, ಈ ಸಿನೆಮಾದಲ್ಲಿ ಮತ್ತೊಮ್ಮೆ ಕಾಣಿಸುತ್ತದೆ. ಅವರ ಗುರುಗಳಾದ ಎಸ್. ರಾಮಚಂದ್ರರಂತೆಯೇ, ಕನ್ನಡದ ಹೊಸದನಿಯ ಸಿನೆಮಾಗಳಿಗೆ ವಿಷ್ಣು ಒಂದು ದೊಡ್ಡ ಕೊಡುಗೆಯಾಗುತ್ತಾರೆ ಎಂದು ನನ್ನ ಅನಿಸಿಕೆ. ಇನ್ನೊಬ್ಬ ಗೆಳೆಯ ಪ್ರಶಾಂತ್ ಪಂಡಿತ್ ಆಯ್ಕೆ ಮಾಡಿ, ಸಂಕಲನ ಒಪ್ಪಿಕೊಳ್ಳುವ ಸಿನೆಮಾಗಳಿಗೆ ಒಂದು ಗುಣಮಟ್ಟ ಇದ್ದೇ ಇರುತ್ತದೆ. ಇಲ್ಲಿಯೂ ಅವರ ಸಂಕಲನ ತನ್ನೆಡೆಗೆ ಗಮನ ಸೆಳೆಯದಂತೆ ನೋಡಿಕೊಳ್ಳುತ್ತಾ, ಕಥನಕ್ಕೆ ಪೂರಕ ಚಲನೆ ನೀಡಿರುವುದು ಅವರ ಪರಿಣತಿಯನ್ನು ತೋರಿಸುತ್ತದೆ. ನೀಲಿ ಹಕ್ಕಿ ಚಿತ್ರ ನೋಡಿ, ನಿರ್ದೇಶಕ ಗಣೇಶ್ ಹೆಗಡೆಯವರೊಂದಿಗೆ ಫೋನಲ್ಲಿ ಮಾತಾಡಿ ಅವರಿಗೆ ಅಭಿನಂದನೆ ತಿಳಿಸಿದ್ದೆ. ಕೆಲವು ದಿನಗಳ ನಂತರ ಅವರನ್ನು ಭೇಟಿಯಾಗುವ ಅವಕಾಶವೂ ಸಿಕ್ಕಿತ್ತು. ಆಗ ಮಾತನಾಡುತ್ತಾ ಒಳ್ಳೆ ಗೆಳೆಯರೂ ಆದರು. ಮತ್ತದೇ ಕನ್ನಡದಲ್ಲಿ ಇಂಥಾ ಸಿನೆಮಾಗಳಿಗಿರುವ ಸವಾಲುಗಳ ಕುರಿತಾಗಿಯೇ ಮಾತು-ಕಥೆ-ವ್ಯಥೆ ಹಂಚಿಕೊಳ್ಳುವಿಕೆ. ಆದರೆ ಇಂಥಾ ನೋಡಬೇಕಾದ ಸಿನೆಮಾಗಳನ್ನು ನಮ್ಮಲ್ಲಿನ ಒಳ್ಳೆಯ ಸಿನೆಮಾಗಳನ್ನು ಪ್ರೋತ್ಸಾಹಿಸುವ ಪ್ರೇಕ್ಷಕ ವೃಂದ ನೋಡದಿದ್ದರೆ, ಪ್ರೋತ್ಸಾಹಿಸದಿದ್ದರೆ, ಮುಂದಿನ ದಿನಗಳಲ್ಲಿ ಸವಾಲು ಇನ್ನಷ್ಟು ದೊಡ್ಡದಾಗಲಿದೆ. ಹೀಗಾಗಿ, ಈ ಸಿನೆಮಾ ನೋಡಲು ಲಭ್ಯವಿರುವಾಗಲೇ ನೋಡಿ, ಅದಕ್ಕೆ ಅಗತ್ಯವಿರುವ ಗೌರವ ನೀಡಿ ಎಂದು ವಿನಂತಿಸುತ್ತೇನೆ. ಸಿನೆಮಾ ನೋಡಲು, ಈ ಕೆಳಗಿನ ಲಿಂಕ್ ಬಳಸಿ.
Abhaya Simha
0 Comments